ಮನುಷ್ಯನ ಜೀವನದಲ್ಲಿ ಹಲವಾರು ಅನಿರೀಕ್ಷಿತ ತಿರುವುಗಳು ಎದುರಾಗುತ್ತವೆ. ಅದರಿಂದ ಆತ ಪಾರಾಗಲು, ತಪ್ಪಿಸಿಕೊಳ್ಳಲು ಹೇಗೆಲ್ಲಾ ಪ್ರಯತ್ನಪಡುತ್ತಾನೆ ಎಂಬುದನ್ನು ಕುತೂಹಲಕರವಾಗಿ ನಿರೂಪಿಸಿರುವ ಚಿತ್ರವೇ ಅವಧಿ. ತೆಲುಗು ಭಾಷೆಯಲ್ಲಿ ಈಗಾಗಲೇ ೨ ಚಿತ್ರಗಳನ್ನು ನಿರ್ದೇಶನ ಅನುಭವ ಪಡೆದಿರುವ ಸಾಯಿಕಿರಣ್ ಮಕಮಲ ಈ ಚಿತ್ರದ ಮೂಲಕ ಸ್ಯಾಂಡಲ್ವುಡ್ ಪ್ರವೇಶಿಸಿದ್ದಾರೆ. ಅವಧಿ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆಗಳನ್ನು ಬರೆದು ನಿರ್ದೇಶನ ಮಾಡುವುದರೊಂದಿಗೆ ನಿರ್ಮಾಣದ ಜವಾಬ್ದಾರಿಯನ್ನು ಕೂಡ ವಹಿಸಿಕೊಂಡಿದ್ದಾರೆ. ಮೂಲತಃ ಒಬ್ಬ ಡಾಕ್ಟರ್ ಆಗಿರುವ ರಂಜಿತ್ ಈ ಚಿತ್ರದಲ್ಲಿ ನಾಯಕನ ಪಾತ್ರ ನಿರ್ವಹಿಸಿದ್ದಾರೆ. ನಟಿ ಅಚಾನ ಈ ಚಿತ್ರದ ನಾಯಕಿ. ಇತ್ತೀಚೆಗಷ್ಟೇ ಈ ಚಿತ್ರದ ಹಾಡುಗಳ ಸಿ.ಡಿ. ಬಿಡುಗಡೆಯಾಗಿದ್ದು ಹಾಡುಗಳನ್ನು ಕೇಳಿದವರೆಲ್ಲ ತುಂಬಾ ಇಷ್ಟಪಟ್ಟಿದ್ದಾರೆ. ಹಾಗಾಗಿ ಆಡಿಯೋ ಸೇಲ್ ಕೂಡ ತುಂಬಾ ಚೆನ್ನಾಗಿದೆ ಎಂದು ಹೇಳಿಕೊಂಡಿರುವ ಚಿತ್ರತಂಡ ಆ ಖುಷಿಯನ್ನು ಹಂಚಿಕೊಳ್ಳಲೆಂದೇ ಪತ್ರಿಕಾಗೋಷ್ಠಿ ಆಯೋಜಿಸಿತ್ತು. ಕುತೂಹಲಕರವಾದ ಥ್ರಿಲ್ಲರ್ ಕಥಾನಕವನ್ನು ಹೊಂದಿರುವ ಈ ಚಿತ್ರದಲ್ಲಿ ೪ ಹಾಡುಗಳಿದ್ದು, ಅರಸು ಅಂತಾರೆ ಎಲ್ಲಾ ಹಾಡುಗಳಿಗೆ ಸಾಹಿತ್ಯ ರಚಿಸಿದ್ದಾರೆ. ಬಾಬು ವರ್ಗಿಸ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಈಗಾಗಲೇ ಚಿತ್ರದ ಪೋಸ್ಟ್ ಪ್ರೊಡಕ್ಷನ್ಸ್ ಕೆಲಸಗಳೆಲ್ಲ ಮುಗಿದಿದ್ದು, ಪ್ರಥಮ ಪ್ರತಿ ಕೂಡ ಹೊರಬಂದಿದೆ. ಸದ್ಯದಲ್ಲೇ ಸೆನ್ಸಾರ್ ಮನೆಗೆ ಹೋಗಲಿದ್ದು ಜುಲೈ ಕೊನೇವಾರ ಅಥವಾ ಆಗಸ್ಟ್ನಲ್ಲಿ ಚಿತ್ರವನ್ನು ರಿಲೀಸ್ ಮಾಡುವ ಪ್ಲಾನ್ ತಂಡ ಹಾಕಿಕೊಂಡಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಾಯಕ ರಂಜಿತ್ ಹಾಡುಗಳು ಜನರನ್ನು ತಲುಪಿರುವುದು ನಮಗೆ ಖುಷಿ ತಂದಿದೆ. ಇದು ಕಾನ್ಸೆಪ್ಟ್ ಹಿನ್ನೆಲೆಯುಳ್ಳ ಥ್ರಿಲ್ಲರ್ ಸಿನಿಮಾ. ಈ ಥರದ ಎಳೆ ಹೊಂದಿದ ಸಿನಿಮಾ ಕನ್ನಡದಲ್ಲಿ ಈವರೆಗೆ ಒಂದೂ ಇಲ್ಲ. ಒಬ್ಬ ಚಿತ್ರ ಕಲಾವಿದನಾಗಿ ನಾನು ಚಿತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಆತನ ಜೀವನದಲ್ಲಿ ಏನೆಲ್ಲ ಸಂದರ್ಭಗಳು ಎದುರಾಗಲಿವೆ ಅವನ್ನೆಲ್ಲ ಆತ ಹೇಗೆ ಎದುರಿಸಿ ಗೆಲ್ಲುತ್ತಾನೆ. ದೇವರು ಆಡುವ ಆಟದಲ್ಲಿ ಮನುಷ್ಯ ಒಬ್ಬ ಕೈಗೊಂಬೆಯಷ್ಟೇ ಎಂದು ಚಿತ್ರದಲ್ಲಿ ಹೇಳಲಾಗಿದೆ ಎಂದು ತನ್ನ ಪಾತ್ರವನ್ನು ಹೇಳಿಕೊಂಡರು.
ನಂತರ ಮಾತನಾಡಿದ ನಿರ್ಮಾಪಕ, ನಿರ್ದೇಶಕ ಸಾಯಿಕಿರಣ್ ಮುಕಮಲ ಕನ್ನಡ ಪ್ರೇಕ್ಷಕರು ವಿಭಿನ್ನವಾದ ಕಥೆಗಳನ್ನು ಇಷ್ಟಪಡುತ್ತಾರೆ ಎಂಬ ನಂಬಿಕೆಯಿಂದ ಈ ಚಿತ್ರವನ್ನು ನಿರ್ಮಿಸಿದ್ದೇನೆ. ಒಬ್ಬ ಕುಂಚ ಕಲಾವಿದನ ಜೀವನದಲ್ಲಿ ದೇವರು ಏನೆಲ್ಲ ಆಟಗಳನ್ನು ಆಡುತ್ತಾನೆ ಎಂಬುದನ್ನು ಒಂದು ಥ್ರಿಲ್ಲರ್ ಕಥಾನದಿದೊಂದಿಗೆ ನಿರೂಪಿಸುವ ಪ್ರಯತ್ನ ಮಾಡಿದ್ದೇನೆ. ಬೆಂಗಳೂರು, ಗೋವಾ ಕೂರ್ಗ್ ಹಾಗೂ ಹೈದರಾಬಾದ್ದ ಫಾರೆಸ್ಟ್ ಏರಿಯಾದಲ್ಲಿ ೩೫ ದಿನಗಳ ಕಾಲ ಈ ಚಿತ್ರದ ಶೂಟಿಂಗ್ ನಡೆಸಿದ್ದೇವೆ ಎಂದು ಹೇಳಿಕೊಂಡರು.
ನಾಯಕಿ ಅಚಾನಾ ಮಾತನಾಡಿ ವಿಭಿನ್ನವಾದ ಚಿತ್ರವೊಂದರಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿರುವುದಕ್ಕೆ ಖುಷಿಯಾಗ್ತಿದೆ ಎಲ್ಲೂ ಬಂದಿರದ ಒಂದು ಎಳೆ ಈ ಚಿತ್ರದಲ್ಲಿದೆ ಎಂದು ಹೇಳಿದರು. ಉಗ್ರಂ ಮಂಜು ಈ ಚಿತ್ರದ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಮೇಶ್ಭಟ್, ಶ್ರೀನಿವಾಸಪ್ರಭು, ಸುಚಿತ್ರಾ, ಜೈಜಗದೀಶ್ ಉಳಿದ ಪಾತ್ರವರ್ಗದಲ್ಲಿದ್ದಾರೆ.